Gajanana Sharma
Gajanana Sharma

ವಾಮನಮೂರ್ತಿ ತ್ರಿವಿಕ್ರಮನಾಗಿ ಅರಳಿದ ಘಳಿಗೆ ನಿನ್ನೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಘಟಿಸಿತು!

ಹೌದು, ನಿನ್ನೆ ವರ್ಲ್ಡ್ ಕಲ್ಚರ್ ಸಭಾಂಗಣ ತುಂಬಿ ತುಳುಕಿತ್ತು. ನುರಿತ ವ್ಯವಹಾರ ತಜ್ಞ, ಜಮೀಲ್ ಸಾಹೇಬರು ಹೊರಗೆ ಕುಳಿತು ಟಿ ವಿ ಮೂಲಕ ಸಮಾರಂಭ ನೋಡಲು ವ್ಯವಸ್ಥೆ ಮಾಡಿರದಿದ್ದರೆ ಹಲವರು ಹಾಗೆಯೇ ಹಿಂದಿರುಗಬೇಕಿತ್ತು.

ರುಚಿಕಟ್ಟಾದ ಉಪಹಾರದೊಂದಿಗೆ ನಮಗೆಲ್ಲರಿಗೂ ಹೊಟ್ಟೆಯ ಜೊತೆ ಹೃದಯ – ಮನಸ್ಸುಗಳೂ ತುಂಬಿದವು. ನಾಲ್ವರು ಪ್ರಸಿದ್ಧ ಲೇಖಕರ ಮಹತ್ಕೃತಿಗಳೊಂದಿಗೆ ಮಿತ್ರ ವಿದ್ವಾನ್ ಜಗದೀಶ ಶರ್ಮರ ” ಮಹಾಭಾರತ ಹೇಳಿಯೂ ಹೇಳದ್ದು ” ಸಾಹಿತ್ಯ ಕೃತಿ, ಖ್ಯಾತ ಚಲನ ಚಿತ್ರನಟ ರಮೇಶ ಅರವಿಂದ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.

ಜಗದೀಶ ಶರ್ಮರು ಒಬ್ಬ ಅಪ್ರತಿಮ ಸಂಸ್ಕೃತ ಭಾಷಾ ವಿದ್ವಾಂಸ. ಶ್ರೀ ಭಾರತೀ ಪ್ರಕಾಶನದಂತಹ ಸಂಸ್ಥೆಗಳ ಮೂಲಕ ನಾಡಿನ ಹಲವು ಲೇಖಕರ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವಲ್ಲಿ‌ ಸ್ವತಃ ಮುಂದಾಳತ್ವ ವಹಿಸಿದ ಕರ್ತವ್ಯಶಾಲಿ. ನಾಡಿನ ಎರಡು ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿರುವ ಅಂಕಣಕಾರ. ಇಷ್ಟೆಲ್ಲದರ ನಡುವೆ ಹಲವು ಕೃತಿಗಳನ್ನು ಸ್ವತಃ ರಚಿಸಿದ ಬರಹಗಾರ. ಅನೇಕ ಕೃತಿಗಳನ್ನು ಸಂಪಾದಿಸಿದ ಚಾಣಾಕ್ಷ ಸಾಹಿತ್ಯಾಸಕ್ತ. ಶ್ರೀರಾಮಚಂದ್ರಾಪುರ ಮಠದ “ಧರ್ಮಭಾರತೀ” ಮಾಸ ಪತ್ರಿಕೆಯನ್ನು ಎರಡು ದಶಕಗಳಿಗೂ ಹೆಚ್ಚುಕಾಲದಿಂದ ಸುಸಂಪನ್ನತೆಯಿಂದ ನಡೆಸಿಕೊಂಡು ಬಂದ ನುರಿತ ಸಂಪಾದಕ.

ಸಂಸ್ಕೃತ ಭಾಷೆ ಮತ್ತು ವಾಙ್ಮಯದ ಕುರಿತು, ಭಾರತೀಯ ಪರಂಪರೆ ಮತ್ತು ಧರ್ಮಶಾಸ್ತ್ರದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಜಗದೀಶ ಶರ್ಮರ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿವೆ. ಅಲಂಕಾರ ಶಾಸ್ತ್ರದಲ್ಲಿ‌ ಸ್ನಾತಕೋತ್ತರ ಪದವಿ ಪಡೆದ ಶ್ರೀಯುತರು , ಬೆಂಗಳೂರಿನ ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರದ ನಿರ್ದೇಶಕರೂ ಕೂಡ.

ಇಷ್ಟೆಲ್ಲದರ ನಡುವೆ ಆಧುನಿಕ ಸಾಹಿತ್ಯದ ಕುರಿತೂ ಇವರ ಓದಿನ ಹರಹು ವಿಶಾಲ. ಅಡಿಗರಿಂದ ಬೇಂದ್ರೆಯವರೆಗೆ, ಕಾರಂತರಿಂದ ಭೈರಪ್ಪರವರೆಗೆ ಎಲ್ಲರ ಕೃತಿಯನ್ನು ಒಳಹೊಕ್ಕು, ತಳಮಟ್ಟದ ವಿಮರ್ಶೆಗಿಳಿಯಬಲ್ಲ ಸಾಮರ್ಥ್ಯ ಶರ್ಮರದ್ದು. ರಾಮಾಯಣ ಮತ್ತು ಮಹಾಭಾರತಗಳ ಕುರಿತು ಶರ್ಮರೊಂದು ಜ್ಞಾನಭಂಡಾರ. ನಿನ್ನೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜೋಗಿಯವರು ಹೇಳಿದಂತೆ, ಅವರಂತಹ ಅನೇಕ ಖ್ಯಾತ ಸಾಹಿತಿಗಳಿಗೂ ಜಗದೀಶ ಶರ್ಮರು ಸಂಸ್ಕೃತದ ಕುರಿತು ಒಬ್ಬ ಸಂಪನ್ಮೂಲ ವ್ಯಕ್ತಿ ಮತ್ತು ಆಕರ.

ಇಷ್ಟಾಗಿಯೂ ಶರ್ಮರು ಇತ್ತೀಚಿನವರೆಗೂ ತಮ್ಮನ್ನು ತೆರೆದುಕೊಂಡಿದ್ದು ಒಂದು ಸೀಮಿತ ವಲಯಕ್ಕೆ ಮಾತ್ರ. ತಮ್ಮೊಳಗೆ ತ್ರಿವಿಕ್ರಮ ಶಕ್ತಿ ಅಡಗಿದ್ದರೂ, ಅದನ್ನು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳದೇ ತನ್ನೊಳಗೇ ಮುಳುಗಿದ್ದ ಈ ವಾಮನಮೂರ್ತಿ ಕಳೆದ ಒಂದೆರಡು ವರ್ಷದಿಂದಷ್ಟೇ, ಜೋಗಿ, ಕುಂಟಿನಿ, ವಿನಾಯಕ ಭಟ್ಟರು ಮುಂತಾದ ಗಣ್ಯ ಸ್ನೇಹಿತರ ಮೂಲಕ ತಮ್ಮ ಸೀಮಿತ ಚೌಕಟ್ಟಿನಿಂದಾಚೆಗೆ ಚಾಚಿಕೊಳ್ಳತೊಡಗಿದವರು.‌ ಸಣ್ಣಕಥೆಗಳ ಕುರಿತೂ ತಮ್ಮ ವಿಮರ್ಶೆಯ ಛಾಪನ್ನು ಒತ್ತಿ, ಗಮನ ಸೆಳೆದವರು.

ಶರ್ಮರು ಎಂತಹ ವಾಗ್ಮಿ ಎಂಬುದಕ್ಕೆ ನಿನ್ನೆಯ ಸಮಾರಂಭ ಸಾಕ್ಷಿಯಾಯಿತು. ಸಭೆಗೆ ಆಗಮಿಸಿದ್ದ ಶೂದ್ರ ಶ್ರೀನಿವಾಸರಂತಹ ಸಹೃದಯ ಬರಹಗಾರ, ಅವರ ವಾಗ್ವೈಖರಿಗೆ ಮನಸೋತು ಜೋಗಿಯವರ ಬಳಿ ಇವರ ಮೊಬೈಲ್ ನಂಬರ್ ಕೇಳಿ ಪಡೆದರಂತೆ! ಇದುವರೆಗೂ ಕೇವಲ ಧಾರ್ಮಿಕ ಕ್ಷೇತ್ರ, ಮಠಮಾನ್ಯಗಳು ಮತ್ತು ಸಂಸ್ಕೃತ ಪ್ರಪಂಚಕ್ಕಷ್ಟೇ ದಕ್ಕಿದ್ದ ಶರ್ಮರು ನಿನ್ನೆ ಅಧಿಕೃತವಾಗಿ ಹೊಸಗನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಒಡ್ಡಿಕೊಂಡರು. ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದರಾದರೂ ಸಾವಣ್ಣ ಪ್ರಕಾಶನದಂತಹ ಹೊರಜಗತ್ತಿಗೆ ಶರ್ಮರನ್ನು ಒಡ್ಡುವ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ ಅವರ ಪುಸ್ತಕ ಪ್ರಕಾಶನಗೊಂಡಿತು. ಇದು ಎಂದೋ‌ ಆಗಬೇಕಿತ್ತು. ಯಾಕೆಂದರೆ ಭಾರತೀಯ ಪರಂಪರೆ ಮತ್ತು ಸಂಸ್ಕೃತ ವಾಙ್ಞಯದ ಕುರಿತು ಜ್ಞಾನವುಳ್ಳ ಲೇಖಕರ ಪಂಕ್ತಿಗೆ ಇವರ ಹೆಸರು ಸೇರ್ಪಡೆಗೊಳ್ಳುವ ಅಗತ್ಯವಿತ್ತು. ಅದು ಶರ್ಮರಿಗೆ ಬೇಕಿತ್ತೋ ಬೇಡವೋ, ಕನ್ನಡ ಸಾಹಿತ್ಯ ಲೋಕಕ್ಕಂತೂ ಅಗತ್ಯವಿತ್ತು.