Mahesha Araballi
Mahesha Araballi
2023/Oct/ಪುಸ್ತಕ-146
ಭಗವದ್ಗೀತೆ : ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ – ಜಗದೀಶಶರ್ಮಾ ಸಂಪ

ಬದುಕಿನ ಲೆಕ್ಕಗಳನ್ನು ಪರಿಹರಿಸಲು ನಮ್ಮ ಹತ್ತಿರ ಕ್ಯಾಲ್ಕ್ಯುಲೇಟರ್ ಇಲ್ಲ. ಸರಳ ಸಮೀಕರಣಗಳಿಗೆ ನಮ್ಮ ಅನುಭವದಿಂದ ಉತ್ತರ ಕಂಡುಹಿಡಿಯಬಹುದು. ಆದರೆ ಸಂಕೀರ್ಣ ಗಣಿತಕ್ಕೆ ಲಾಗರಿದಮ್ ಟೇಬಲ್ ಬೇಕು. ನಮ್ಮಲ್ಲಿರುವ ದ್ವಂದ್ವ, ಸಂದೇಹ, ಅನುಮಾನಗಳನ್ನು ಪರ್ಯಾಲೋಚಿಸಿ ಪರಿಹರಿಸಿಕೊಳ್ಳಲು ಜಗದೀಶಶರ್ಮಾ ಸಂಪ ಅವರ “ಭಗವದ್ಗೀತೆ – ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ” ಕೃತಿ ಸಹಾಯಕವಾಗಿದೆ. ಜೀವನದ ಸಂಕೀರ್ಣ ಸಮೀಕರಣಕ್ಕೆ ಇದೊಂದು ಲಾಗರಿದಮ್ ಟೇಬಲ್. ಪಾಕೇಟ್ ಸೈಜಿನಲ್ಲಿರುವ ಈ ಕೃತಿಯನ್ನು ಒನ್ ಡೇ ಇಂಟರ್ನ್ಯಾಶನಲ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಬ್ರೇಕಿನಲ್ಲಿ ಓದಿ ಮುಗಿಸಬಹುದು.

ಪೀಠಿಕೆಯಲ್ಲಿ ಲೇಖಕರು “ಒಬ್ಬೊಬ್ಬರ ನೋವು ಬೇರೆ. ಒಂದೊಂದು ಊರಿನ ನೋವು ಬೇರೆ. ಒಂದೊಂದು ಕಾಲದ ನೋವು ಬೇರೆ. ಎಷ್ಟು ಜೀವಿಯೋ, ಅವುಗಳಲ್ಲಿ ಅದೆಷ್ಟು ಭಾವವೋ, ಜಗತ್ತಿನಲ್ಲಿ ಅಷ್ಟು ನೋವುಗಳು” ಎಂದು ಹೇಳುತ್ತಾ ಈ ಕೃತಿಯ ವಿಸ್ತಾರವನ್ನು ಪರಿಚಯಿಸಿದ್ದಾರೆ.

ಈ ಕೃತಿಯಲ್ಲಿ ಸಿದ್ಧ ಮಾದರಿಯ ಸರಳ ಸೂತ್ರಗಳನ್ನು ಹುಡುಕುವುದಕ್ಕಿಂತ ಭಗವದ್ಗೀತೆಯ ಆಶಯವನ್ನು ಅರ್ಥ ಮಾಡಿಕೊಳ್ಳಬಹುದು. ಕೃತಿಯ ಸ್ವರೂಪವೂ ಆಸಕ್ತಿಕರವಾಗಿದೆ. ಅಧ್ಯಾಯಗಳ ನಡುವಿನ ಕೊಂಡಿಗಳು ಅರ್ಥಪೂರ್ಣವಾಗಿವೆ.

ಈ ಕೃತಿಯಲ್ಲಿ ಸಾಕಷ್ಟು ಉಲ್ಲೇಖನೀಯ ಸಾಲುಗಳಿವೆ. ಅವುಗಳಲ್ಲಿ ನನಗಿಷ್ಟವಾದ ಕೆಲವು ಸಾಲುಗಳು ಹೀಗಿವೆ –

“ಯಾವುದನ್ನು ಬದಲಾಯಿಸಲಾಗದೋ ಅದರ ಬಗ್ಗೆ ನೋಯಬಾರದು”

“ಸನಾತನವೆಂದರೆ ನಿನ್ನೆಯೂ ಇದ್ದು, ಇಂದೂ ಇದ್ದು, ಮುಂದೂ ಇರುವುದು”

ಕೃಷ್ಣ ಅರ್ಜುನನಿಗೆ “ಧರ್ಮಕ್ಕೆ ವಿರುದ್ಧವಲ್ಲದ ಆಸೆಯೆಲ್ಲವೂ ನಾನೇ”

“ಒಂದು ಮನ್ವಂತರ: 30,67,20,000 ವರ್ಷಗಳು. ಹದಿನಾಲ್ಕು ಮನ್ವಂತರಗಳಿಗೆ ಬ್ರಹ್ಮನ ಒಂದು ಹಗಲಾಗುತ್ತದೆ. ಮತ್ತೆ ಇಷ್ಟೇ ಕಾಲ ಅವನ ರಾತ್ರಿ”

“ಕರುಣೆ ದೇವರ ಗುಣ. ಅದು ದಟ್ಟವಾಗಿ ಕಂಡರೆ ನಮಗದು ದೇವರೇ ಎನಿಸುತ್ತದೆ”