ವ್ಯಾಸ ಸಂದರ್ಶನ | Vyasa Sandarshana

ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು? ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ.
ಅಷ್ಟು ಕೆಲಸ ಅವರದ್ದು!
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಲ್ಲರಿಗೂ ಬೇಕಾಗುವಂತೆ ಆದವರು ಅವರು.
ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡಿದ್ದಲ್ಲ; ಅವರೇ ಹೋಗಿ ಹೋಗಿ ಒಳಿತು ಮಾಡಿದವರು.
ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸಿದ್ದಲ್ಲ; ಅವರೇ ಯೋಜಿಸಿ ಬರೆದರು.
‘ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ’ ಎಂಬ ವಿಶ್ವಹಿತದ ಭಾವ ಅವರದ್ದು.
ಅವರು ಕೋಪಗೊಂಡದ್ದಿಲ್ಲ, ಶಾಪ ಕೊಟ್ಟಿದ್ದಿಲ್ಲ, ಬೈದಿದ್ದಿಲ್ಲ; ಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದಿದ್ದರು!
ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು.
ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ. ವಾದವೆಂದರೆ ಮಾತು. ಅವರು ಮಾತಿನ ಮೇರು; ವಾಹ್ಮಯದ ಚಕ್ರವರ್ತಿ, ಅವರ ಮಾತೆಲ್ಲ ಸುವಾದವೇ, ಸಂವಾದವೇ. ಏಕೆ ಮಾತಾಡಬೇಕೋ ಅದಕ್ಕಾಗಿ: ಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು.
ಅವರ ಮಾತೂ, ಅವರ ಮಾತಿನ ವಿಧಾನವೂ ಮಾದರಿಯಾದರೆ ಈ ಮಾತುಗಳಿಗೆ ಸಾರ್ಥಕತೆ.